ಮಾಡುವ ವಿಧಾನ:-
1/2 ಲೋಟ ಅಕ್ಕಿಯನ್ನು ತೊಳೆಯದೆ ಬಾಣಲೆಯಲ್ಲಿ ಹಾಕಿ ಕಡಿಮೆ ಉರಿಯಲ್ಲಿ ಕೆಂಪಗೆ ಘಮ್ ಎಂದು ವಾಸನೆ ಬರುವವರೆಗೆ ಹುರಿದಿಡಿ.
ನಂತರ 1/2 ಲೋಟ ಹುರಿಗಡಲೆ ಜೊತೆಗೆ ನುಣ್ಣಗೆ ಪುಡಿ ಮಾಡಿ ಜರಡಿ ಹಿಡಿದಿಡಿ. ಅಕ್ಕಿ ಆದಷ್ಟೂ ನುಣ್ಣಗೆ ಪುಡಿ ಆಗಬೇಕು.
1/2 ಲೋಟ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದು ತರಿ ತರಿಯಾಗಿ ಪುಡಿ ಮಾಡಿಡಿ.
1/2 ಲೋಟ ಒಣ ಕೊಬ್ಬರಿ ತುರಿದಿಡಿ.
2 ಚಮಚ ಬಿಳಿ ಎಳ್ಳು ಹುರಿದಿಡಿ.
1 1/2 ಲೋಟ ಬೆಲ್ಲ ಪುಡಿ ಮಾಡಿ, 1/4 ಲೋಟ ನೀರು ಹಾಕಿ ಬಿಸಿಯಾಗಲು ಇಡಿ. ಬೆಲ್ಲ ಕರಗಿ ಒಂದೆಳೆ ಪಾಕ ಬಂದಾಗ ಎಲ್ಲಾ ಸಾಮಗ್ರಿಗಳನ್ನು, ಚಿಟಿಕೆ ಏಲಕ್ಕಿ ಪುಡಿಯೊಂದಿಗೆ ಹಾಕಿ ಚೆನ್ನಾಗಿ ಕಲೆಸಿ. 2 ಚಮಚ ತುಪ್ಪ ಹಾಕಿ ಕಲೆಸಿ ಒಲೆಯಿಂದ ಇಳಿಸಿ.
ಸ್ವಲ್ಪ ಬೆಚ್ಚಗೆ ಆದ ಮೇಲೆ ಕೈಗೆ ತುಪ್ಪ ಸವರಿ ಉಂಡೆ ಮಾಡಿ ಮಧ್ಯದಲ್ಲಿ ಒಂದು ರಂಧ್ರ ಮಾಡಿಡಿ.
ರಂಧ್ರದ ತುಂಬಾ ತುಪ್ಪ ಹಾಕಿ ಹತ್ತಿಯ ತುಪ್ಪದ ಬತ್ತಿ ಮಾಡಿ ದೀಪ ಹಚ್ಚಿಸಿ ಶಿವನಿಗೆ ಆರತಿ ಬೆಳಗಿ ದೀಪ ಶಾಂತವಾದ ನಂತರ ಹತ್ತಿಯ ಭಾಗವನ್ನು ತೆಗೆದು ಪ್ರಸಾದದ ರೀತಿ ಮನೆಯ ಸದಸ್ಯರೆಲ್ಲಾ ತಿನ್ನಬಹುದು!
ಹಾಗಾದರೆ ಈ ಸೋಮವಾರ ನೀವೂ ಕೂಡಾ ಈ ಹುರಿದಕ್ಕಿಯ ತಂಬಿಟ್ಟಿನ ಆರತಿ ಮಾಡಿ ಶಿವನ ಅನುಗ್ರಹ ಪಡೆಯುತ್ತೀರಲ್ಲಾ!?
ಧನ್ಯವಾದಗಳು.






